
ತೆರೆದ ಹಾಳೆಗಳನ್ನೇ ದಿಟ್ಟಿಸಿ ನೋಡಿದ ಹರಿಣಿಯನ್ನು ಅಮೃತಾಳ ಮುಗ್ಧ ಕಂಗಳು ತಿರುಗಿ
ದಿಟ್ಟಿಸಿದವು. ಅಂದು ಹರಿಣಿ ಆಸ್ಪತ್ರೆಯಲ್ಲಿ ಕಾಯುತ್ತಾ ತನ್ನದೇ ಭಾವಲೋಕದಲ್ಲಿ ತಲ್ಲೀನಳಾಗಿದ್ದಾಗ
ಡಾಕ್ಟರ್ ಸಂತೋಷ್ ಅವರ ಮೂರು ವರ್ಷದ ಕೂಸು ಅಮೃತಾ, ಅವಳ ಕೈಲಿದ್ದ ಪುಸ್ತಕವನ್ನೂ ಕಸಿದುಕೊಂಡು
ತುಂಟತನದಿಂದ ಹಾಳೆಗಳನ್ನು ಹರಿದು ಹಾಕಿದ್ದಳು. ಆ ಕಂದನ ಮುಗ್ಧ ಕಂಗಳು, ಸ್ನಿಗ್ಧ ಸೌಂದರ್ಯ
ಶ್ರೀಕಾಂತನ ಸರಳತೆಯಂತೆಯೇ ತೋರಿದ್ದವು.
“ಮಿಸ್ಸೆಸ್. ಹರಿಣಿ ಶ್ರೀಕಾಂತ್?” ಎಂದು ನರ್ಸು ಕೂಗಿದ ತಕ್ಷಣ ಎದ್ದು ಒಳಗೆ ಹೋಗಿದ್ದಳು.
“ಏನೂ ತೊಂದರೆಯಿಲ್ಲ ಹರಿಣಿ. ತುಂಬಾ ಆರೋಗ್ಯವಾಗಿದ್ದೀ. ನೀನು ನಿನ್ನ ಕಾಳಜಿ ಹೆಚ್ಚು
ತೊಗೋಬೇಕು.ಆಗಲೇ ನಿನ್ನ ಕೂಸಿಗೂ ಆರೋಗ್ಯ. ಡೆಲಿವರಿ ಆಗೋವರೆಗೂ ಪೌಷ್ಠಿಕ ಆಹಾರ ಸತತವಾಗಿ
ತೊಗೋಬೇಕು. ನಂತರದ ಪಥ್ಯ ನಿನಗೆ ಸಮಯ ಬಂದಾಗ ಹೇಳ್ತೇನೆ. ಯಾವುದೇ ದುಃಖ ಟೆನ್ಶನ್ ಗಳನ್ನ
ಮನಸ್ಸಿಗೆ ಹಚ್ಚಿಕೊಳ್ಳಬಾರದು. ನಿನ್ನ ಮಾನಸಿಕ ಸ್ಥಿಮಿತ, ಪ್ರಫುಲ್ಲತೆ ಈಗ ಬಹಳ ಮುಖ್ಯ. ಯಾವಾಗ
ಕಸಿವಿಸಿ ಅನ್ನಿಸಿದರೂ ನನಗೆ ತಕ್ಷಣ ಫೋನ್ ಮಾಡು. ಆಯ್ತಾ?” ಅಂತ ಡಾಕ್ಟರ್. ಸ್ಮಿತಾ ಹೇಳಿದ್ದರು.
ನಂತರ ತಲೆಯಾಡಿಸಿ ಎದ್ದು ನಿಲ್ಲುತ್ತಿದ್ದ ಹರಿಣಿಯನ್ನು ಮತ್ತೆ ಕೈಹಿಡಿದು, “ಬಿ ಬ್ರೇವ್ ಹರಿಣಿ.
ನಾವೆಲ್ಲಾ ನಿನ್ನ ಜೊತೆಗಿದ್ದೇವೆ.” ಎಂದು ಧೈರ್ಯ ಹೇಳಿದ್ದರು.

“ನಮಸ್ಕಾರ, ಕೂತ್ಕೊಳಿ. ಏನಾಯಿತು?” ಶ್ರೀಕಾಂತ ಕೇಳಿದ.
“ಸ್ಟೂಲು ಹಾಕಿಕೊಂಡು ಅಟ್ಟದ ಮೇಲಿಂದ ಸಾಮಾನು ಇಳಿಸೋದಕ್ಕೆ ಹೋಗಿ ಕಾಲು ಜಾರಿ
ಬಿದ್ದುಬಿಟ್ಟಳು.” ಹರಿಣಿಯ ತಂದೆ ಹೇಳಿದರು.
“ಎಲ್ಲಿ ನೋಡುವ” ಶ್ರೀಕಾಂತ ಮೆಲ್ಲಗೆ ಹರಿಣಿಯ ಪಾದವನ್ನು ಹಿಡಿದು ಪರೀಕ್ಷಿಸಿದ.
“ಏನೂ ಆಗಿಲ್ಲ. ಸಣ್ಣ ಉಳುಕು ಅಷ್ಟೇ. ಊತ ಹೆಚ್ಚಿರೋದ್ರಿಂದ ಸ್ವಲ್ಪ ಸಮಯ ಬೇಕಾಗಬಹುದು. ನೋವು
ಕಡಿಮೆಯಾಗಲಿಕ್ಕೆ ಮಾತ್ರೆ ಬರೆದಿದ್ದೇನೆ. ಈ ತೈಲದಿಂದ ಪ್ರತಿದಿನ ಬೆಳಿಗ್ಗೆ, ಸಂಜೆ ಮಸಾಜ್
ಮಾಡಬೇಕು. ಎಷ್ಟು ವಿಶ್ರಾಂತಿ ಕೊಡ್ತೀರೋ ಅಷ್ಟು ಬೇಗ ಗುಣವಾಗುತ್ತೆ”

ನಿಶ್ಚಿತಾರ್ಥದ ನಂತರ ಇಬ್ಬರೇ ಭೇಟಿಯಾದಾಗ ಶ್ರೀಕಾಂತ ತನ್ನ ವೃತ್ತಿಯ ಬಗ್ಗೆ ಅವಳೊಂದಿಗೆ
ಮಾತನಾಡಿದ್ದ. ವೈದ್ಯನಾಗಿ ಅಭ್ಯಸಿಸುತ್ತಿದ್ದರೂ ಮುಂದೆ ಓದುವ ಇರಾದೆ, ಕುಟುಂಬಕ್ಕೆ ಸಮಯ ಕೊಡಲು
ಸಾಧ್ಯವಾಗದ ಕೆಲವು ಅನಿವಾರ್ಯತೆಗಳು, ಆ ಅನಿವಾರ್ಯತೆಗಳನ್ನು ಅವಳು ಸ್ವೀಕರಿಸಬೇಕಾದ ರೀತಿ,
ಅವಳಿಂದ ಅವನು ನಿರೀಕ್ಷಿರುವ ಬೆಂಬಲ, ಎಲ್ಲದರ ಬಗ್ಗೆಯೂ ಅವನು ಮನಬಿಚ್ಚಿ ಹೇಳಿಕೊಂಡಿದ್ದ. ಅವನ ಆ
ಪ್ರಾಮಾಣಿಕತೆ, ಅವಳಿಗೆ ಕೊಟ್ಟ ಪ್ರಾಮುಖ್ಯತೆ, ಅವಳೊಂದಿಗೆ ಇದ್ದಾಗ ಅವನು ನೀಡುತ್ತಿದ್ದ ಕಂಫರ್ಟ್
, ಎಲ್ಲವೂ ಅವನ ಮೇಲೆ ಅವಳಿಗಿದ್ದ ವಿಶ್ವಾಸವನ್ನು ಒಲವನ್ನೂ ಹೆಚ್ಚಿಸುತ್ತಿದ್ದವು. ಅವರಿಬ್ಬರ
ಮಧ್ಯೆ ದಿನವಿಡೀ ಮಾತನಾಡುವ ಹುಚ್ಚು ಕಾತರವಿರಲಿಲ್ಲ, ಒಬ್ಬರ ಸಮಯವನ್ನು ಇನ್ನೊಬ್ಬರು
ಕಿತ್ತುಕೊಳ್ಳುವ ಪೋಸೆಸಿವ್ನೆಸ್ಸ್ ಇರಲಿಲ್ಲ, ಹಗಲೆಲ್ಲಾ ಊರು ಸುತ್ತುವ ಶೋಕಿಯಿರಲಿಲ್ಲ, ಅಪರೂಪದ
ಭೇಟಿಗಳಲ್ಲಿ ತಮ್ಮ ಪ್ರೇಮವನ್ನು ದೈಹಿಕವಾಗಿ ಪ್ರದರ್ಶನಕ್ಕಿಡುವ ಚೆಲ್ಲಾಟವಿರಲಿಲ್ಲ,
ಗಂಟೆಗಟ್ಟಲೆ ಮಾತನಾಡುವ ಫೋನ್ ಕಾಲ್ ಗಳಿರಲಿಲ್ಲ, ವೈಭವೀಕರಣವಿರಲಿಲ್ಲ . ಇಬ್ಬರ ನಡುವೆ ನೇರ
ನುಡಿಗಳಿದ್ದವು, ಮೌನಗಳಿದ್ದವು, ಸೌಜನ್ಯವಿತ್ತು, ಸಹಜತೆಯಿತ್ತು, ಮಾತುಗಳಲ್ಲಿ ಚೈತನ್ಯವಿತ್ತು,
ಆಲಿಸುವ ವ್ಯವಧಾನವಿತ್ತು, ಕಾಯುವ ಸಹನೆಯಿತ್ತು, ಅರ್ಥೈಸಿಕೊಳ್ಳುವ ನಲುಮೆಯಿತ್ತು,
ಪ್ರಾಮಾಣಿಕತೆಯಿತ್ತು. ಶ್ರೀಕಾಂತ ಹರಿಣಿಯ ಪ್ರೌಢತೆಗೆ, ಮುಕ್ತತೆಗೆ, ಚೆಲುವಿಗೆ, ಮಾತುಗಳಿಗೆ
ಮಾರುಹೋಗಿದ್ದ. ಅವಳಲ್ಲಿದ್ದ ಸಿಂಪ್ಲಿಸಿಟಿ
ಅವನನ್ನು ಇನ್ನಿಲ್ಲದಂತೆ ಸೆಳೆದಿತ್ತು.
ಶ್ರೀಕಾಂತನಲ್ಲಿದ್ದ ವೈಚಾರಿಕತೆಯನ್ನು ಹರಿಣಿ ಮೆಚ್ಚಿಕೊಂಡಿದ್ದಳು. ಅವನು ಆಕರ್ಷಕ ಮಾತುಗಾರನಲ್ಲ.
ಆದರೆ ಅವನಲ್ಲಿ ವಿಚಾರಗಳ ಮತ್ತು ಆದರ್ಶಗಳ
ಶ್ರೀಮಂತಿಕೆಯಿತ್ತು. ಎಲ್ಲರ ಜೊತೆ ಎಷ್ಟು ಸೌಮ್ಯವಾಗಿ ಬೆರೆತು ಮಾತನಾಡುತ್ತಿದ್ದನೋ, ಅಗತ್ಯ
ಬಿದ್ದಾಗ ಅಷ್ಟೇ ಕಟುವಾಗಿ ಕಡ್ಡಿ ತುಂಡು ಮಾಡಿದ ಹಾಗೆ ಮಾತನಾಡುವ ಜಾಣ್ಮೆ ಅವನಲ್ಲಿ ಇತ್ತು.
ಶ್ರೀಕಾಂತ ಪ್ರಚಂಡ ಬುದ್ಧಿವಂತನೆಂದು ಹರಿಣಿ ಆಗಾಗ ಹೊಗಳುತ್ತಿದ್ದಳು. ಕೆಲವೊಮ್ಮೆ ಆ
ಪ್ರಶಂಸೆಯನ್ನು ಅವಳ ಬಾಯಿಂದ ಕೇಳುವುದಕ್ಕಾಗಿಯೇ, ಹೊಸ ವಿಚಾರಗಳನ್ನೂ ಅವಳೊಂದಿಗೆ
ಹಂಚಿಕೊಳ್ಳುತ್ತಿದ್ದ ಶ್ರೀಕಾಂತ. ಅವನನ್ನು ಬಣ್ಣಿಸುವುದರಲ್ಲಿ ಅವಳೂ ಸುಖಿಸುತ್ತಿದ್ದಳು. ಅವನು
ಅವಳಿಗಾಗಿ ಕೆಂಪು ಗುಲಾಬಿಯ ಗುಚ್ಛಗಳನ್ನಾಗಲಿ, ಮೃದು ಬೊಂಬೆಗಳನ್ನಾಗಲಿ, ಬಟ್ಟೆಗಳನ್ನಾಗಲಿ
ಖರೀದಿಸಿ ನೀಡುತ್ತಿರಲಿಲ್ಲ, ಅವಳೂ ಅದನ್ನು ನಿರೀಕ್ಷಿಸುತ್ತಿರಲಿಲ್ಲ. ಸಣ್ಣ ಉಡುಗೊರೆಗಳಲ್ಲಿ,
ಸಂಕ್ಷಿಪ್ತ ಭೇಟಿಗಳಲ್ಲಿ ಅವರ ಸಂಭ್ರಮವಿತ್ತು. ಸಂಭ್ರಮ ಮನೆಯೆಲ್ಲ ಹರಡುವ ಕಾಲ ಕೂಡಿ ಬರಲು
ತಡವಾಗಲಿಲ್ಲ. ಸಂತಸದಿಂದ ಇಬ್ಬರೂ ಸುಖಗಳನ್ನೂ, ದುಃಖಗಳನ್ನೂ ಹಂಚಿಕೊಳ್ಳುವ ಭಾಷೆಯಿತ್ತರು.

ಅವನ ಕೊಠಡಿಯ ದೊಡ್ಡ ಕಿಟಕಿಯಿಂದ ಎದುರಿನ ಜನನಿಬಿಡ ರಸ್ತೆಯ ಉದ್ದಗಲವೂ
ಕಾಣುತ್ತಿತ್ತು. ಶ್ರೀಕಾಂತ್, ತನ್ನ ಗಡಿಬಿಡಿಯ ದಿನಚರಿಯಲ್ಲಿ ಕೆಲ ಕ್ಷಣಗಳ ಬಿಡುವು ಸಿಕ್ಕಿದರೂ ಸಾಕು, ಆ ರಸ್ತೆಯನ್ನು ನೋಡುತ್ತಿದ್ದ. ಕಿಟಕಿಯಿಂದ ಬರುವ ತಂಗಾಳಿಯನ್ನು ಆಸ್ವಾದಿಸುತ್ತಿದ್ದ.
ಅದೇ ಕಿಟಕಿಯ ಕಡೆ ಮುಖ ಮಾಡಿ ನೆನಪುಗಳನ್ನು ಮೆಲುಕುಹಾಕುತ್ತಿದ್ದಳು ಹರಿಣಿ, ಅದೇ ಮೇಜು,
ಅದೇ ಕುರ್ಚಿಗಳು, ಅದೇ ಬಾಗಿಲ ಮರೆ. ತೆರೆದ ಕಿಟಕಿಗಳು, ಶ್ರೀಕಾಂತನ ತೆರೆದ ಮನಸ್ಸು, ತೆರೆದ ತೋಳುಗಳನ್ನು
ನೆನೆಪಿಸಿದವು. ಕಿಟಕಿಯಾಚೆ ದೃಷ್ಟಿ ಹರಿಸಿದರೆ ಮತ್ತೆ ಅವನದ್ದೇ ದನಿ, “ನಿನಗೆ ಅಲ್ಲಿಂದಲೇ
ಗುಲಾಬಿ ಹೂ ತಂದಿದ್ದು” , “ಅಲ್ಲೊಂದು ಹೊಸ ಫುಡ್ ಪಾಯಿಂಟ್ ತೆರೆದಿದೆ. ಈ ಸಂಜೆ ನಿನಗೆ ಅಲ್ಲೇ
ಟ್ರೀಟ್”... ಪಕ್ಕದಲ್ಲೇ ನಿಂತು ರಸ್ತೆಯೆಡೆಗೆ ಬೆಟ್ಟು ಮಾಡಿ ಮಾತಾಡುತ್ತಿದ್ದ ಶ್ರೀಕಾಂತ
ಇದ್ದಕ್ಕಿದ್ದಂತೆಯೇ ಮಾಯವಾಗಿದ್ದ.
ಕೊಠಡಿ ತೆರೆಸಿ ಕೊಟ್ಟಿದ್ದ ನರ್ಸು ಮತ್ತೆ ಬಂದು “ಮೇಡಂ, ನೀವು ಬಂದು ಆಗಲೇ ಅರ್ಧ ಘಂಟೆ
ಆಗುತ್ತಾ ಬಂತು. ಏನು ಬೇಕಿತ್ತು? ಸಿಕ್ಕಿತೇ? ನಾನು ಹುಡುಕಲಿಕ್ಕೆ ಸಹಾಯ ಮಾಡಲೇ?” ಎಂದಿದ್ದಳು.
“ಸಾರಿ ಸಿಸ್ಟರ್, ಅದು ಸಿಗುತ್ತಿಲ್ಲ. ನಾನು ಹೊರಡುತ್ತೇನೆ. ತುಂಬಾ ಥ್ಯಾಂಕ್ಸ್” ಎಂದು
ಹೇಳಿ ಹೊರಟಿದ್ದಳು.
ಕೊಠಡಿಯಿಂದ ಹೊರಬಂದು ಮೆಟ್ಟಿಲುಗಳನ್ನಿಳಿದು ಬಂದಳು. ಎಮೆರ್ಜೆನ್ಸಿ ಕ್ಯಾಶುಯಲಿಟಿ ಕಣ್ಣಿಗೆ ಬಿತ್ತು..
ಮತ್ತೆ ನೆನಪುಗಳ ಹಾವಳಿ...
“ಆಕ್ಸಿಡೆಂಟ್ ನಲ್ಲಿ ಶ್ರೀಕಾಂತ್ ಅವರಿಗೆ ಹೊಡೆದ ಕಾರಿನಿಂದ ಅವರ ರಿಬ್ ಕೇಜ್ ಗೆ ಹೊಡೆತ
ಬಿದ್ದಿದೆ. ಅದು ಚೂರಾಗಿ, ಹೃದಯಕ್ಕೆ ಘಾಸಿಯಾಗಿದೆ. ಅಷ್ಟಲ್ಲದೇ ಗಾಯಗಳಿಂದ ಸಾಕಷ್ಟು ರಕ್ತ
ಹೋಗಿದೆ. ಹೃದಯ ಬಹಳ ಕುಂಠಿತವಾಗಿದೆ. ಏನೂ ಹೇಳೋಕಾಗಲ್ಲ. ಹರಿಣಿ, ವಿ ವಿಲ್ ಟ್ರೈ ಅವರ್ ಬೆಸ್ಟ್.”
ಡಾಕ್ಟರ್ ಸಂತೋಷ್ ಹೇಳಿದ್ದರು.
ನಾಲ್ಕು ಘಂಟೆಗಳು ಹೊರಗೆ ನಿಂತು ಕಾದ ಸಮಯ ಹರಿಣಿಯ ಜೀವನದ ಅತಿ ದೊಡ್ಡ ನಾಲ್ಕು ಘಂಟೆ.
ಚಡಪಡಿಕೆಗೆ ಹೃದಯ ಸುತ್ತಲಿದ್ದ ಇಪ್ಪತ್ತು ಮಂದಿಗೆ ಕೇಳುವ ಹಾಗೆ ಬಡಿದುಕೊಳ್ಳುತ್ತಿದ್ದ ಹಾಗೆ
ಹರಿಣಿಗೆ ಭಾಸವಾಗಿತ್ತು. ತನ್ನೊಳಗೆ ಮಿಡಿಯುತ್ತಿದ್ದ ಆ ಪುಟ್ಟ ಜೀವದ ಹೃದಯ ಅವಳಲ್ಲಿ ಇನ್ನೂ ಭಯ
ಹುಟ್ಟಿಸಿತ್ತು. ನಾಲ್ಕು ಘಂಟೆಗಳ ಸತತ ಪ್ರಯತ್ನದ ನಂತರವೂ ಸಂತೋಷ್ ಕೊಟ್ಟ ಉತ್ತರ, “ಸಾರಿ
ಹರಿಣಿ, ನಾವು ಶಕ್ತಿ ಮೀರಿ ಪ್ರಯತ್ನ ಪಟ್ಟೆವು. ಆದರೂ ಶ್ರೀಕಾಂತನನ್ನು ನ್ನ ಉಳಿಸೋಕೆ ಆಗ್ಲಿಲ್ಲ. ಐ
ಆಮ್ ರಿಯಲಿ ಸಾರಿ”
ಅವೇ ಪದಗಳು ಹರಿಣಿಯ ಕಿವಿಯಲ್ಲಿ ಪ್ರತಿಧ್ವನಿಸತೊಡಗಿದವು... ಶ್ರೀಕಾಂತನನ್ನ ಉಳಿಸೋಕೆ
ಆಗ್ಲಿಲ್ಲ...
ಮತ್ತೆ ಕಂಬನಿಗಳನ್ನು ಮಿಡಿದು ಆಸ್ಪತ್ರೆಯಿಂದ ಹೊರನಡೆದಿದ್ದಳು. ರಸ್ತೆಯಲ್ಲಿ ನಡೆದು
ಬರುವಾಗಲೂ ಶ್ರೀಕಾಂತನ ಜೊತೆಗೆ ಸಿನಿಮ ನೋಡಿದ ಥಿಯೇಟರು, ಅವನ ಜೊತೆ ಖುಷಿಯಲ್ಲಿ ಸುತ್ತಿದ
ಫೂಟ್ಪಾಥ್ಗಳು, ಅವನೊಂದಿಗೆ ಪಾನಿಪುರಿ ತಿಂದ ಗಾಡಿಗಳು, ಅವಳ ಹುಟ್ಟುಹಬ್ಬಕ್ಕೆ ಅವಳಿಗೆ ಇಷ್ಟವಾದ
ಕೇಕ್ ತಂದ ಬೇಕರಿ, ಅವರ ಮದುವೆಯ ಉಂಗುರಗಳನ್ನು ಕೊಂಡ ಚಿನ್ನದ ಅಂಗಡಿ, ಅವರ ಮೊದಲ ಖಾಸಗಿ ಭೇಟಿಗೆ
ಸಾಕ್ಷಿಯಾದ ಪಾರ್ಕು, ರಾಶಿ ರಾಶಿ ಪುಸ್ತಕಗಳನ್ನೂ, ಸಿ ಡಿ ಗಳನ್ನು ಕೊಂಡ ಅಂಗಡಿಗಳು, ಯಾವಾಗಲೂ
ಕಾರು ನಿಲ್ಲಿಸುತ್ತಿದ್ದ ನಿಲುಗಡೆ, ಎಲ್ಲವೂ ಶ್ರೀಕಾಂತನ ನೆನಪು ಮೂಡಿಸುತ್ತಿದ್ದವು.
ಕಣ್ಣಿಗೆ ಬಿದ್ದ ಪ್ರತಿಯೊಂದು ದೃಶ್ಯ, ಕಿವಿಗೆ ಬಿದ್ದ ಪ್ರತಿಯೊಂದು ಶಬ್ದ, ವಾಸ್ತವವನ್ನು
ನಿರಾಕರಿಸಿ ಶ್ರೀಕಾಂತನ ಇರುವಿಕೆಯನ್ನು ಹೆಜ್ಜೆ ಹೆಜ್ಜೆಗೂ ನಿರೂಪಿಸುವ ಹಠಕ್ಕೆ ಬಿದ್ದ
ಹಾಗಿದ್ದವು. ತನ್ನೊಳಗಿದ್ದ ಅವನ ಜೀವವೂ ಸಹ.

ನಿಂತಲ್ಲೇ ಕುಸಿದು, ಸಣ್ಣ ಮಗುವಿನಂತೆ ಬಿಕ್ಕಿ ಬಿಕ್ಕಿ ಅಳತೊಡಗಿದ್ದಳು. ಧ್ವನಿಯು ಅಸಹನೀಯ
ಖಾಲಿತನದ ಕಡಲಿನಲ್ಲಿ ಮುಳುಗಿ ಹೋಗಿತ್ತು. ಮನಸ್ಪೂರ್ತಿಯಾಗಿ ಅತ್ತು ಶೂನ್ಯ ದೃಷ್ಟಿಯಲ್ಲಿ
ದೀರ್ಘಕಾಲ ಕೂತಲ್ಲಿಯೇ ಕುಳಿತಿದ್ದಳು. ಕಣ್ಮುಚ್ಚಿ ತೆರೆದು, ಮೇಜಿನ ಮೇಲಿದ್ದ ಹರಿದ ಪುಸ್ತಕದ
ಕಡೆ ಕಣ್ಣು ಹಾಯಿಸಿದ್ದಳು. ಗಾಳಿಗೆ ತೆರೆದ ಪುಟಗಳು ವರ್ತಮಾನದ ಗೋಡೆಗಳನ್ನು ಮೀರಿ ಶ್ರೀಕಾಂತನ
ನೆನಪುಗಳನ್ನು ಬೆನ್ನತ್ತಿದ್ದವು.

“ನೆನಪುಗಳಾ ಅಂಗಳದಿ... ನಿನ್ನ ನಗೆಯ ತುಂಬಿಕೊಂಡ ಬೆಳದಿಂಗಳು...” ಹಾಡು ಸಣ್ಣಗೆ ತೇಲಿ ಬರುತ್ತಿತ್ತು.
ನಿದ್ರಿಸುವ ಯತ್ನದಲ್ಲಿ ಮುಚ್ಚಿದ ಕಣ್ಣುಗಳ ಅಂಚಲ್ಲಿ ಹನಿಗಳು ಮೂಡಿ
ಕೆನ್ನೆಯನ್ನಪ್ಪುತ್ತಿದ್ದವು.